ಈ ಕನಸು

ಇದು ವರ್ಷದ ಕನಸು

ಜನರ ಬಳಿಗೆ ಈ ಕನಸು.ಕಾಂ. ನಿಮ್ಮ ಸಮಸ್ಯೆಗಳಿಗೆ ಮಾಧ್ಯಮದ ಮೂಲಕ ಪರಿಹಾರದ ಪ್ರಯತ್ನ...ನಿರೀಕ್ಷಿಸಿರಿ... ಈ ಕನಸು.ಕಾಂಗೆ ಸುದ್ದಿ,ವಿಶೇಷ ಲೇಖನ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ.info@ekanasu.com

ವಿಚಾರ

ಶ್ರೀ ಹರಿಯ ಪ್ರತಿಯೊಂದು ಅವತಾರಗಳು ವಿಶಿಷ್ಟವಾಗಿದ್ದು ಪ್ರಾಕೃತಿಕವಾದ ಸೃಷ್ಟಿಯ ವೈವಿಧ್ಯಗಳಲ್ಲಿ ಅಡಕವಾಗಿರುವ ದೈವೀ ಶಕ್ತಿಯ ಪ್ರಭಾವವನ್ನು ತಿಳಿಯಲು ಸಹಕಾರಿಯಾಗಿದೆ. ಭಾದ್ರಪದ ಶುಕ್ಲಪಕ್ಷ ದ್ವಾದಶಿಯಂದು ಮಹರ್ಷಿ ಕಶ್ಯಪ ಮತ್ತು ಅದಿತಿ ದೇವಿಯರ ಕಂದನಾಗಿ ಆವಿರ್ಭವಿಸಿದ ವಾಮನನ ಮಹಿಮೆಗಳು ಭಾಗವತಾದಿ ಪುರಾಣಗಳಲ್ಲಿ ವರ್ಣಿಸಲ್ಪಟ್ಟಿದೆ.


ಅದಿತಿ ಮಾತೆಯ ಉತ್ತಮ ಪುತ್ರರತ್ನನನ್ನು ಹಡೆಯಬೇಕೆಂದು ಪತಿಯಾದ ಕಶ್ಯಪರಲ್ಲಿ ಭಿನ್ನವಿಸಿಕೊಂಡಾಗ ಬ್ರಹ್ಮನಿಂದ ಉಪದೇಶಿಸಲ್ಪಟ್ಟ ಪಯೋವ್ರತ ಆಚರಿಸುವಂತೆ ಮಹರ್ಷಿಗಳು ಪತ್ನಿಗೆ ಹೇಳಿದರು. ಫಾಲ್ಗುಣ ಶುದ್ಧ ಪಾಡ್ಯದಿಂದ ದ್ವಾದಶಿಯವರೆಗೆ ಹನ್ನೆರಡು ದಿನಗಳವರೆಗೆ ಗೋಕ್ಷೀರವನ್ನು ಮಾತ್ರ ಆಹಾರವಾಗಿ ಸ್ವೀಕರಿಸಿ ಸದ್ವಚನ ಸಂಪನ್ನರಾಗಿ ಯಾರಿಗೂ ಹಿಂಸೆ ಮಾಡದೇ ವ್ರತನಿಷ್ಠರಾಗುವುದೇ `ಪಯೋವ್ರತ' . ಶ್ರೀಮದ್ ಭಾಗವತದ ಅಷ್ಟಮ ಸ್ಕಂದದಲ್ಲಿ ವಿವರಿಸಿದಂತೆ ಸಾಧ್ವಿ ಅದಿತಿ ದೇವಿ ಈ ವ್ರತವನ್ನು ಆಚರಿಸಿ ವಿಷ್ಣುವಿನ ಅವತಾರವಾದ ವಾಮನನ್ನು ಮಗನಾಗಿ ಪಡೆದಳು.
ಭಾಗವತೋತ್ತಮರಾದ ಪ್ರಹ್ಲಾದರ ಮೊಮ್ಮಗ ವಿರೋಚನನ ಮಗ ಬಲಿ ಚಕ್ರವರ್ತಿ ಸ್ವರ್ಗಾಪೇಕ್ಷೆಯಿಂದ ನೂರು ಅಶ್ವಮೇಧ ಮಾಡುವ ಸಿದ್ಧತೆಯಲ್ಲಿದ್ದನು. ಒಂದು ಮನ್ವಂತರದ ಅವಧಿಗೆ ಒಬ್ಬ ಇಂದ್ರ ಈ ಮಾತನ್ನು ಉಳಿಸುವುದಕ್ಕಾಗಿ ಮತ್ತು ಬಲಿಯ ಭಕ್ತಿಯ ದೃಢತೆಯನ್ನು ತಿಳಿಯುವುದಕ್ಕಾಗಿ ವಾಮನನು ರಾಕ್ಷಸೇಂದ್ರನ ಆಸ್ಥಾನಕ್ಕೆ ಆಗಮಿಸಿದನು. ಶುಕ್ರಾಚಾರ್ಯರ ನಿರ್ದೇಶನದಲ್ಲಿ ನರ್ಮದಾ ನದೀ ತೀರದ `ಭೃಗುವತ್ಸಕ' ಯಾಗ ಶಾಲೆಗೆ ಯಾಚಕ ವಟುವಾಗಿ ಬಂದ ವಾಮನನು ಕೇಳಿದ್ದು ಮೂರಡಿ ನೆಲ, ನಡೆಯುವ ಜಾಗ. ದಾನ ಶೂರನಾದ ಬಲಿ ತ್ರಿಪಾದ ಸ್ಥಳವನ್ನು ಕೊಡುತ್ತೇನೆಂದು ಹೇಳಿದಾಗ ಶುಕ್ರಾಚಾರ್ಯರು ಆಕ್ಷೇಪಿಸಿದರೂ ವಚನ ಭ್ರಷ್ಟನಾಗಲು ಒಪ್ಪದ ಚಕ್ರವರ್ತಿ ಮೂರು ಹೆಜ್ಜೆಯನ್ನು ಇಡಬೇಕೆಂದು ವಿಪ್ರಕುಮಾರನಲ್ಲಿ ವಿನಂತಿಸಿದ್ದು ಭಕ್ತಿಯ ಸಾದೃಶ್ಯ ಅಲ್ಲಿ ವ್ಯಕ್ತವಾಯಿತು.
ವಿಶ್ವಜಿತ್ ಯಾಗ ಮಾಡಿ ಬ್ರಹ್ಮದತ್ತವಾದ ವೈಹಾಯಸ ಎಂಬ ವಿಮಾನವನ್ನು ಶುಕ್ರಾಚಾರ್ಯರಿಂದ ದಿವ್ಯ ಶಂಖವನ್ನೂ ಪಡೆದ ಬಲಿಗೆ ಯಜ್ಞವಿಧಿಗಳಾದ ಅಗ್ನಿಯ ಆಧಾನ, ಬ್ರಹ್ಮೌದನ ಇತ್ಯಾದಿಗಳ ಬಗ್ಗೆ ತಿಳುವಳಿಕೆ ಇದ್ದಿತ್ತು. ಅದರಂತೆ ಯಾಗದೀಕ್ಷಿತನಾದನು. ಯಾವುದೇ ಋಣ ಇಟ್ಟುಕೊಳ್ಳದೇ ದಾನ ಮಾಡಬೇಕು.
``ಪಾದೋಸ್ಯ ವಿಶ್ವಾಭೂತಾನಿ ತ್ರಿಪಾದಸ್ಯಾಮೃತಂ ದಿವಿ ತ್ರಿಪಾದೂಧ್ರ್ವ ಉದೈತ್ಪುರುಷಃ ಪಾದೋ ಸ್ಯೇಹಾಭವಾತ್ಪುನಃ'' ಪುರಷಸೂಕ್ತ ವೈದಿಕ ಮಂತ್ರ ಸಾಹಿತ್ಯದಲ್ಲಿ ತಿಳಿಸಿದಂತೆ ವಿಷ್ಣುವು ಪಾದದಿಂದ ವಿಶ್ವವನ್ನು ಅಳೆಯುತ್ತಾನೆ. ಹುಟ್ಟಿದಾಗಲೇ ಸೂರ್ಯನಿಂದ ಗಾಯತ್ರಿ ಮಂತ್ರ ಉಪದೇಶಿಸಲ್ಪಟ್ಟು ಬ್ರಹಸ್ಪತಿ ಯಜ್ಞೋಪವೀತ ಕರುಣಿಸಿದರು. ಕಶ್ಯಪರಿಂದ ಬ್ರಹ್ಮಜ್ಞಾನದ ಮಾರ್ಗ ಸೂಚಿಸಲ್ಪಟ್ಟು ಪೃಥ್ವೀ ದೇವಿ ಕೃಷ್ಣಾಜಿನ ಅದಿತಿಯಿಂದ, ಕೌಪೀನ ಬ್ರಹ್ಮನಿಂದ, ಕಮಂಡಲ ಕುಬೇರನಿಂದ, ಭಿಕ್ಷಾಪಾತ್ರೆ ಜಗತ್ತಿನ ತಾಯಿಯಾದ ಪಾರ್ವತೀ ದೇವಿಯಿಂದ ವಾಮನನಿಗೆ ಮೊದಲ ಭಿಕ್ಷೆ ಕೊಡಲ್ಪಟ್ಟಿತು.
ಬಲಿಯ ಚಕ್ರವರ್ತಿ ಯ ರಾಜ್ಯವನ್ನು ಮೊದಲ ಹೆಜ್ಜೆಯಿಂದ ಸ್ವೀಕರಿಸಿ ಎರಡನೇ ಪಾದದಿಂದ ಸಮಸ್ತ ಭೂಮಿ ಆಕಾಶಕ್ಕೂ ವಿಸ್ತರಿಸಿದ ತ್ರಿವಿಕ್ರಮನ ಮೂರನೇ ಪಾದ ಬಲಿಯ ಶಿರದ ಮೇಲೆ ಇಡಲ್ಪಟ್ಟಿತು.
ಬಲಿಯ ಭಕ್ತಿ ತ್ಯಾಗಗಳಿಂದ ಪ್ರಸನ್ನನಾದ ತ್ರಿವಿಕ್ರಮನಾಗಿ ಬೆಳೆದ ವ್ಯಾಪಕನಾದ ವಿಷ್ಣುವು ಭಕ್ತನಿಗೆ ಪರಮಪಾದದ ಬೆಳಕನ್ನು ತೋರಿಸಿದನು. ಭೂಮಿಯ ಅಡಿಯಲ್ಲಿರುವ ಅಧೋಲೋಕ ಸುತಲದಲ್ಲಿ ಬಲಿಯು ಸಾಮ್ರಾಟನಾಗಿ ಮೆರೆದರೆ ಹರಿಯು ಅವನಿಗೆ ನಿತ್ಯದರ್ಶನವೀಯುವ ಭಗವಂತನಾಗಿ ಕಂಗೊಳಿಸಿದನು. ವೈವಸ್ವತ ಮನ್ವಂತರದ ಏಳನೆಯ ಪರ್ಯಾಯದ ತ್ರೇತಾಯುಗದಲ್ಲಿ ವಾಮನ ಅವತಾರ ತಾಳಿದ ನಾರಾಯಣ ಬಲಿ ಚಕ್ರವರ್ತಿಗೆ ಮುಂದಿನ ಸಾವರ್ಣಿ ಮನ್ವಂತರಕ್ಕೆ ಇಂದ್ರ ಪದವಿ ಎಂದು ವರಪ್ರದಾನ ... ಇವೆಲ್ಲಾ ಪರಮಾತ್ಮನ ಪರಮ ಪಾದದ ಮಹಿಮೆಗಳು. ವಾಮನ ಜಯಂತೀ ಸಂದರ್ಭದಲ್ಲಿ ತ್ರಿಲೋಕ ವಿಸ್ತಾರವಾದ ವಾಮನನ ತ್ರಿಪಾದಾಮೃತ ನಡೆ ನುಡಿಯನ್ನು ಪುರಾಣ ಶ್ರವಣದಿಂದ ತಿಳಿಯುವುದು ಜ್ಞಾನ ದಾಯಕ.

- ಎಲ್.ಎನ್. ಭಟ್ ಮಳಿ.

0 comments:

Post a Comment