ನುಡಿಸಿರಿ
ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ "ಆಳ್ವಾಸ್ ನುಡಿಸಿರಿ - 2010" ಅಕ್ಟೋಬರ್ 29,30 ಮತ್ತು 31ರ ಶುಕ್ರ, ಶನಿ ಮತ್ತು ಭಾನುವಾರಗಳಂದು ಮೂಡಬಿದಿರೆಯ ವಿದ್ಯಾಗಿರಿಯಲ್ಲಿರುವ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
2004ರಲ್ಲಿ ಆರಂಭಗೊಂಡ ಆಳ್ವಾಸ್ ನುಡಿಸಿರಿ ಸಮ್ಮೇಳನವು ವರ್ಷಂಪ್ರತಿ ನಿರಂತರವಾಗಿ ನಡೆಯುತ್ತಿದ್ದು ಇದು 7ನೇ ವರ್ಷದ ಸಮ್ಮೇಳನವಾಗಲಿದೆ. "ಕನ್ನಡ ಮನಸ್ಸು : ಜೀವನ ಮೌಲ್ಯ" ಎಂಬ ಮುಖ್ಯ ಪರಿಕಲ್ಪನೆಯಲ್ಲಿ ಈ ಬಾರಿಯ ಸಮ್ಮೇಳನ ಮೂಡಿಬರಲಿದೆ.
ಕನ್ನಡ ಮನಸ್ಸು: ಸಾಹಿತ್ಯಕ - ಸಾಂಸ್ಕೃತಿಕ ಸವಾಲುಗಳು, ಕನ್ನಡ ಮನಸ್ಸು - ಬೌದ್ಧಿಕ ಸ್ವಾತಂತ್ರ್ಯ , ಕನ್ನಡ ಮನಸ್ಸು - ಪ್ರಚಲಿತ ಪ್ರಶ್ನೆಗಳು, ಕನ್ನಡ ಮನಸ್ಸು : ಸಾಹಿತಿಯ ಜವಾಬ್ದಾರಿಗಳು, ಕನ್ನಡ ಮನಸ್ಸು - ಶಕ್ತಿ ಮತ್ತು ವ್ಯಾಪ್ತಿ, ಹಾಗೂ ಕನ್ನಡ ಮನಸ್ಸು - ಸಮನ್ವಯದೆಡೆಗೆ ಪರಿಕಲ್ಪನೆಯಲ್ಲಿ ಈವರೆಗಿನ ಸಮ್ಮೇಳನಗಳು ನಡೆದಿವೆ.
ನಾಡಿನ ಖ್ಯಾತ ಸಾಹಿತಿಗಳು, ಕವಿಗಳು, ಕತೆಗಾರರು, ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. 29ರಂದು ಬೆಳಗ್ಗೆ ಸಮ್ಮೇಳನ ಉದ್ಘಾಟನೆಗೊಳ್ಳಲಿದ್ದು, 31ರಂದು ಸಾಯಂಕಾಲ ಸಮಾರೋಪಗೊಳ್ಳಲಿದೆ. ಸಮಾರೋಪಸಮಾರಂಭದಲ್ಲಿ ನಾಡಿನ ಗಣ್ಯರನ್ನು "ನುಡಿಸಿರಿ ಪ್ರಶಸ್ತಿ"ನೀಡಿ ಪುರಸ್ಕರಿಸಲಾಗುವುದು ಎಂದು ಡಾ.ಆಳ್ವ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಹರೀಶ್ ಕೆ.ಆದೂರು ಉಪಸ್ಥಿತರಿದ್ದರು.
Subscribe to:
Post Comments (Atom)
Video

0 comments:
Post a Comment