ರಾಜ್ಯ - ರಾಷ್ಟ್ರ
ಪಡುಬಿದ್ರಿ: ಯುಪಿಸಿಎಲ್ ವಿದ್ಯುತ್ ಸಾಗಾಟಕ್ಕೆ ಕೆಪಿಟಿಸಿಎಲ್, ಸರ್ವೋಚ್ಛ ನ್ಯಾಯಾಲಯದ ತಡೆಯಾಜ್ಞೆಯನ್ನೂ ಲೆಕ್ಕಿಸದೆ ಕಾರ್ಕಳ ತಾಲೂಕು ಬೋಳ ಗ್ರಾಮದ ಬೋಳಕೋಡಿಯ ಅರಣ್ಯ ಪ್ರದೇಶದ ಕೆಪಿಟಿಸಿಎಲ್ ಟವರ್ ನಂಬರ್ 248, 249 ಹಾಗೂ 250 ಇರುವ ಪ್ರದೇಶಗಳಲ್ಲಿ ಮರ ಕಡಿದಿರುವ ಬಗ್ಗೆ ನಂದಿಕೂರು ನಾಗಾರ್ಜುನ ವಿರೋಧಿ ಹೋರಾಟದ ಸದಸ್ಯ ನಂದಿಕೂರು ಜಯಂತ ಕುಮಾರ್ ಗಮನ ಸೆಳೆದಿದ್ದಾರೆ.
ಮರ ಕಡಿಯಬಾರದೆಂದು ಮಾ. 7ರವರೆಗೆ ಸರ್ವೋಚ್ಛ ನ್ಯಾಯಾಲಯವು ತಡೆ ಆಜ್ಞೆ ನೀಡಿದ್ದರೂ, ಕೆಪಿಟಿಸಿಎಲ್ ಕಂಪನಿಯು ಎಲ್ಲೂರು ಯುಪಿಸಿಎಲ್ನಿಂದ ವಿದ್ಯುತ್ ಪೂರೈಕೆಗಾಗಿ ಹೈಟೆನ್ಶನ್ ಲೈನನ್ನು ಹಾಕುತ್ತಿದ್ದಾರೆ. ಈ ಪ್ರದೇಶದಲ್ಲಿ ಸುಮಾರು 200ಕ್ಕೂ ಅಧಿಕ ಮರಗಳನ್ನು ಕಡಿಯಲಾಗಿದೆ. ಈ ಬಗ್ಗೆ ಉಡುಪಿ ಜಿಲ್ಲಾಧಿಕಾರಿಗೆ ಹಾಗೂ ಅರಣ್ಯಾಧಿಕಾರಿಗಳಿಗೆ ದೂರಿದ್ದೇವೆ. ಆದರೆ ಈವರೆಗೆ ಅವರು ಕ್ರಮಕೈಗೊಂಡಿಲ್ಲ. ಕೂಡಲೇ ನಾವು ಸರಿಯಾದ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಉಡುಪಿ ರೈತ ಸಂಘದ ಅದ್ಯಕ್ಷ ವಿಜಯ ಕುಮಾರ ಹೆಗ್ಡೆ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ ಉಡುಪಿ ಪವರ್ ಕಾರ್ಪರೇಶನ್ 400ಕೆವಿ ವಿಧ್ಯುತ್ಪೂರೈಕೆಗಾಗಿ ಲೈನ್ ಎಳೆಯಲು ಪಶ್ಚಿಮ ಘಟ್ಟದಲ್ಲಿ ಸುಮಾರು 4ಲಕ್ಷ ಮರಗಳನ್ನು ಕಡಿಯಲಾಗುತ್ತಿದೆ. ಇದಕ್ಕಾಗಿ ಸರ್ವೋಚ್ಛ ನ್ಯಾಯಾಲಯವು ಮಾ. 7ರ ತನಕ ಯಾವುದೇ ಮರ ಕಡಿಯಬಾರದೆಂದು ತಡೆಯಾಜ್ಞೆ ನೀಡಿದ್ದರೂ, ಮಾರ್ಚ್ ಒಂದರಿಂದ ಮರವನ್ನು ಕಡಿಯಲಾಗುತ್ತಿದೆ. ಸರಕಾರದ ಪ್ರಾಯೋಜತ್ವದಲ್ಲಿ ನಡೆಯುವ ಈ ಕೆಲಸವನ್ನು ಉಡುಪಿ ಜಿಲ್ಲಾ ರೈತ ಸಂಘ ಖಂಡಿಸುತ್ತಿದೆ. ಅವರು ಕೂಡಲೇ ಕೆಲಸ ನಿಲ್ಲಿಸಬೇಕು. ತುರ್ತಾಗಿ ಇದಕ್ಕೆ ಸಂಬಂದಿಸಿ ಉಡುಪಿ ಜಿಲ್ಲಾಧಿಕಾರಿ, ಜಿಲ್ಲಾ ಅರಣ್ಯಾಧಿಕಾರಿ ಮತ್ತು ಸಂಬಂದ ಪಟ್ಟವರನ್ನೆಲ್ಲಾ ನ್ಯಾಯಾಲಯ ನಿಂದನೆಯಡಿ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಶುಕ್ರವಾರ ಈ ಪ್ರದೇಶದಲ್ಲಿ ಮರ ಕಡಿಯುತ್ತಿದ್ದಾರೆ ಎಂಬ ಸುದ್ದಿ ತಿಳಿದು ನಾವು ಇಲ್ಲಿಗೆ ಬೇಟಿ ನೀಡಿದಾಗ ಸುಮಾರು 150ಜನರ ತಂಡ ಮರ ಕಡಿಯುತ್ತಿರುವುದು ಕಂಡು ಬಂದಿದೆ. ನಮ್ಮನ್ನು ಕಂಡ ಕೂಡಲೇ ಅವರು ಕೆಲಸ ನಿಲ್ಲಿಸಿ ಸ್ಥಳದಿಂದ ಪಲಾಯನ ಮಾಡಿದ್ದಾರೆ. ಇದೇ ವೇಳೆ ನಾವು ಅರಣ್ಯಾಧಿಕಾರಿಯವರಿಗೆ ದೂರು ನೀಡಿದ್ದೇವೆ. ಅವರು ಕ್ರಮ ಕೈಗೊಳ್ಳುತ್ತೇವೆ ಎಂಬ ಭರವಸೆ ನೀಡಿದ್ದರೂ ಈತನಕ ಕ್ರಮಕೈಗೊಂಡಿಲ್ಲ ಎಂದು ಇನ್ನಾರೈತ ಸಂಘದ ಘಟಕಾಧ್ಯಕ್ಷ ಪ್ರಶಾಂತ್ ಶೆಟ್ಟಿ ಹೇಳಿದರು.
ಇದೇ ವೇಳೆ ಮೂಡಬಿದ್ರಿಯ ಫಾರೆಸ್ಟ್ ರೇಂಜರ್ ಶ್ರೀಧರ್ ದೂರವಾಣಿಯಲ್ಲಿ ಮಾತನಾಡಿ, ಕಾಡಿನಲ್ಲಿ ವಿಧ್ಯುತ್ ತಂತಿಯ ಕಾಮಗಾರಿಯನ್ನು ಬೆಂಗಳೂರಿನ ದೀಪಕ್ ಕೇಬಲ್ ಸಂಸ್ಥೆಯು ಮಾಡುತ್ತಿದೆ. ಆ ಸಂಸ್ಥೆಯ ಅಧಿಕಾರಿ ಪ್ರಸನ್ನ ಎಂಬವರ ಮೇಲೆ ಎಪ್ಐಆರ್ ದಾಖಲಿಸಿಲಾಗಿದೆ ಎಂದು ಹೇಳಿದ್ದಾರೆ.
ಚಿತ್ರ - ವರದಿ: ಭಾಗ್ಯವಾನ್ ಮುಲ್ಕಿ
Subscribe to:
Post Comments (Atom)
Video

0 comments:
Post a Comment